Friday 31 October 2014

ಅಕ್ಟೋಬರ್ 31 ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ವಾರ್ಷಿಕ 


        ಬ್ರಿಟಿಷರ ನಿದ್ದೆಗೆಡಿಸಿದ್ದ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಇಂದು. ಈ ದಿನವನ್ನು ಭಾರತ ಸರಕಾರ 'ರಾಷ್ಟ್ರೀಯ ಏಕತಾ ದಿನ' ವನ್ನಾಗಿ ಆಚರಿಸುತ್ತಿದೆ. ಶಾಲೆಗಳಲ್ಲಿ ಅ.31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನವನ್ನು ಆಚರಿಸುವ ಮೂಲಕ ಮಕ್ಕಳಿಗೆ ಪಟೇಲ್ ಅವರ ಜೀವನ, ಸಾಧನೆಗಳ ಮಹತ್ವ ತಿಳಿಸಿಕೊಡಬೇಕಾದುದು ನಮ್ಮೆಲ್ಲರ ಹೊಣೆ.
      ಹಲವಾರು ಮಹಾನುಭಾವರ ತ್ಯಾಗ ಬಲಿದಾನಗಳ ಮೂಲಕ ಗಳಿಸಿದ ಭಾರತದ ಸ್ವಾತಂತ್ರ್ಯದ ಇತಿಹಾಸ ರೋಚಕವಾದದ್ದು. ದೇಶ ಸ್ವಾತಂತ್ರ್ಯಗಳಿಸುವ ನಿಟ್ಟಿನಲ್ಲಿ ಚಳುವಳಿಗೆ ಧುಮುಕಿ ಹೋರಾಟ ನಡೆಸಿದವರು ಅಸಂಖ್ಯಾತ ಮಂದಿ. ಅವರಲ್ಲಿ "ಭಾರತದ ಉಕ್ಕಿನ ಮನುಷ್ಯ" ಎಂದೇ ಕರೆಸಿಕೊಂಡ ವಲ್ಲಭಭಾಯಿ ಪಟೇಲ್ ಕೂಡಾ ಪ್ರಮುಖರು.
          ಗುಜರಾತಿನ  ನಡಿಯಾಡ್ ಗ್ರಾಮದಲ್ಲಿ ಝವೇರ್‌ ಭಾಯಿ ಮತ್ತು ಲಾಡ್‌ಬಾಯಿ ದಂಪತಿಗಳ ಸುಪುತ್ರರಾಗಿ ರೈತರ ಕುಟುಂಬದಲ್ಲಿ ಜನಿಸಿದ ಅವರು, 1917ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಹಮದಾಬಾದ್‌ನ ನೈರ್ಮಲ್ಯ ಆಯಕ್ತರಾಗಿ ಆಯ್ಕೆಯಾದರು. ವಲ್ಲಭಭಾಯಿಯವರಿಗೆ ರಾಜಕೀಯದಲ್ಲಿ ಇಷ್ಟವಿರಲಿಲ್ಲ. ಚಂಪಾರಣ್ಯದಲ್ಲಿ ಗಾಂಧಿ ನೇತೃತ್ವದಲ್ಲಿ ರೈತರ ಪರವಾಗಿ ಬ್ರಿಟಿಷರ ವಿರುದ್ದ ನಡೆಸಿದ ಹೋರಾಟದಲ್ಲಿ ಜಯ ಸಾಧಿಸಿದ ರೀತಿಯನ್ನು ಕಂಡು ಪ್ರಭಾವಿತರಾದ ವಲ್ಲಭಭಾಯಿ ಪಟೇಲ್, ಸ್ವಾತಂತ್ರ್ಯ ಚಳುವಳಿಗೆ ಧುಮುಕುವುದಾಗಿ ಘೋಷಿಸಿದರು. ಪ್ರಪ್ರಥಮ ಬಾರಿಗೆ 1917ರಲ್ಲಿ ಗುಜರಾತ್‌ನ ಬೋರ್ಸಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಲ್ಲಭಭಾಯಿ ಪಟೇಲರು, ರಾಷ್ಟ್ರಾದ್ಯಂತ ಗಾಂಧೀಜಿಯವರ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂಬ ಮನವಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
        'ಕರ ನಿರಾಕರಣೆ' ಆಂದೋಲನದ ಅಂಗವಾಗಿ ಖೇಡಾ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ತೆರಿಗೆ ನೀಡುವುದನ್ನು ತಿರಸ್ಕರಿಸುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದರಿಂದ ಕೆಂಡಾಮಂಡಲವಾದ ಸರಕಾರ ಸಾವಿರಾರು ರೈತರನ್ನು ಬಂಧಿಸಿತು. ಇದರಿಂದ ದೇಶಾದ್ಯಂತ ಅನುಕಂಪದ ಅಲೆ ಮೂಡಿ ಬಂದ ಹಿನ್ನೆಲೆಯಲ್ಲಿ ಸರಕಾರ ವಲ್ಲಭಭಾಯಿ ಪಟೇಲ್ ಅವರೊಂದಿಗೆ ಚರ್ಚಿಸಲು ನಿರ್ಧರಿಸಿ ರೈತರ ಒಂದು ವರ್ಷದ ತೆರಿಗೆಯನ್ನು ರದ್ದುಗೊಳಿಸಿತು.
        ಗಾಂಧೀಜಿಯವರ ಅಸಹಕಾರ ಚಳವಳಿಯನ್ನು ಬೆಂಬಲಿಸಿದ ಪಟೇಲ್ 3 ಲಕ್ಷ ಕಾರ್ಯಕರ್ತರ ಪಡೆಯನ್ನು ಸಿದ್ಧಗೊಳಿಸಿ 1.5 ಮಿಲಿಯನ್ ಹಣವನ್ನು ಸಂಗ್ರಹಿಸಿದರು. ವಿದೇಶಿ ವಸ್ತುಗಳನ್ನು ತ್ಯಜಿಸುವಂತೆ ಕರೆ ನೀಡಿ ತಾವು ಸ್ವತಃ ಖಾದಿ ಬಟ್ಟೆಗೆ ಮಾರು ಹೋದರು.ರಾಷ್ಟ್ರ ನಿರ್ಮಾಣಕ್ಕಾಗಿ ಭಾರತೀಯ ಅಡಳಿತಾತ್ಮಕ ಸೇವೆ ಹಾಗೂ ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳನ್ನು ಆರಂಭಿಸಿ ಉಕ್ಕಿನ ಮನುಷ್ಯರೆಂದು ಖ್ಯಾತಿಪಡೆದ ಸರ್ದಾರ್ ವಲ್ಲಭಭಾಯಿ ಪಟೇಲರು 1950ರಲ್ಲಿ ನಿಧನ ಹೊಂದಿದರು. ಆದರೆ ಅವರ ಧೈರ್ಯ ಸಾಹಸಗಳು ಜನಮಾನಸದಲ್ಲಿ ಇನ್ನೂ ಚಿರಸ್ಥಾಯಿಯಾಗಿ ಉಳಿದಿದೆ.


ಜನ್ಮ ವಾರ್ಷಿಕ ದಿನದಂದು ಈ ಮಹಾನ್ ನಾಯಕನಿಗೆ ಅನಂತ ವಂದನೆಗಳು.  

No comments: