ಶ್ರೀ ನಾರಾಯಣ ಗುರು ಜಯಂತಿ
ಶುಭಾಶಯಗಳು
ಸೆಪ್ಟೆಂಬರ್-8
“ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು.”
ಸಮಾಜ ಸೇವಕ, ದಲಿತೋದ್ದಾರಕ, ದೀನರ ಬಂಧು, ಸಾಧುವೂ, ಸಂತರೂ, ಜ್ಞಾನಿಯೂ ಆದ ಮಹಾನ್ ಚೇತನ ಶ್ರೀ ನಾರಾಯಣಗುರುಗಳ ಜನನವು 1856ರ ವರ್ಷದಲ್ಲಿ ಕೇರಳದ ಚೆಂಬಳಂತಿ ಎಂಬಲ್ಲಿ ಸಿಂಹ ಮಾಸದ ಶತಭಿಷ
ನಕ್ಷತ್ರದ ಓಣಂ ದಿನವಾದ ಆಗಸ್ಟ್ 20ರ ದಿನದಂದು ಆಯಿತು. ಸಮಾಜದಲ್ಲಾಗುವ ಶೋಷಣೆಯನ್ನು ಕಂಡು ಬಹಳ ಮನನೊಂದಿದ್ದ
ಅವರು ಬಾಲ್ಯದಲ್ಲೇ ವಿಧೇಯತೆ, ಕರ್ತವ್ಯನಿಷ್ಠೆ, ಸೌಜನ್ಯತೆಗಳನ್ನು ಬೆಳೆಸಿಕೊಂಡಿದ್ದರು. ಏಕಾಗ್ರತೆಯಿಂದ ಸಂಸ್ಕ್ರತ ವಿದ್ಯೆ ಕಲಿತು ಪಂಡಿತರಾದರು.
“ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಿ” ಎಂದು ಸಂದೇಶ ನೀಡಿದವರು ನಾರಾಯಣ ಗುರುಗಳು. ನಾರಾಯಣ ಗುರು ಅವರು
ಸಮಾಜದಲ್ಲಿದ್ದ ಅಸ್ಪೃಶ್ಯತೆ, ದಲಿತ ನಿಂದನೆ, ಹಿಂಸಾಚಾರ, ಜಾತಿಭೇದ, ಸ್ತ್ರೀದಾಸ್ಯತ್ವ, ಅಸಮಾನತೆ, ಮೂಢನಂಬಿಕೆ ಇವುಗಳ ನಿವಾರಣೆಗಾಗಿ ಅವಿರತವಾಗಿ ಶ್ರಮಿಸಿದರು. ನಾರಾಯಣ ಗುರು ಅವರು
ಈ ಲೋಕವನ್ನಗಲಿದ ದಿನ ಸೆಪ್ಟೆಂಬರ್ 20, 1928. ಜನರಲ್ಲಿರುವ ಮೂಢನಂಬಿಕೆಯ ಅಜ್ಞಾನವನ್ನು ಹೋಗಲಾಡಿಸಲು ನಾರಾಯಣ ಗುರು ಅವರು ಹಲವಾರು
ವಿದ್ಯಾಕೇಂದ್ರಗಳನ್ನು ಪ್ರಾರಂಭಿಸಿದರು. ಕೀಳ್ಜಾತಿಯ ಜನರ ಕಷ್ಟ ಪರಿಹಾರಕ್ಕಾಗಿ ಮೇಲ್ಜಾತಿಯವರ ವಿರುದ್ಧ ಶಾಂತಿಯ ಹೋರಾಟ ನಡೆಸಿದರು. “ಮಾನವರೆಲ್ಲರೂ ಒಂದೇ” ಎಂಬ ತತ್ವವನ್ನು ಜನತೆಗೆ ಸಾರಿ ಹೇಳಿದರು.
ದೇವಸ್ಥಾನಗಳಿಗೆ ಕೀಳ್ಜಾತಿಯವರಿಗೆ ಪ್ರವೇಶ ನಿರಾಕರಿಸಿದ್ದನ್ನು ಖಂಡಿಸಿ ತಾವೇ ದೇವಾಲಯಗಳ
ನಿರ್ಮಾಣ ಮಾಡಿ ಹಿಂದುಳಿದ ವರ್ಗದವರಿಗೆ ಪ್ರವೇಶ ಮಾಡುವಂತೆ ಹೇಳಿದರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಶ್ರೀಲಂಕಾ ಮುಂತಾದ ಕಡೆ ಸಂಚಾರ ಮಾಡಿ ಜನರಲ್ಲಿ ಭಗವಂತನ ಭಕ್ತಿಯ ಜ್ಞಾನ ಮಾರ್ಗವನ್ನು
ತೋರಿಸಿಕೊಟ್ಟರು. ಕೇರಳದ ವರ್ಕಳ ಶಿವಗಿರಿ ಎಂಬಲ್ಲಿ ಶಾರದಾಂಬೆ ಆರಾಧಕರಾಗಿ, ಕರ್ನಾಟಕ ಪರಶುರಾಮ ಸೃಷ್ಠಿಯ ತುಳುನಾಡ ಪುಣ್ಯಭೂಮಿ ಕುದ್ರೋಳಿ
ಎಂಬಲ್ಲಿ ಶ್ರೀ ಗೋಕರ್ಣನಾಥೇಶ್ವರನ ಲಿಂಗ ಪ್ರತಿಷ್ಠಾಪಿಸಿ ಸರ್ವರಿಗೂ ದೇವರ ದರ್ಶನವಾಗುವಂತೆ
ಮಾಡಿದರು. ಹೀಗೆ ವಿವಿದೆಡೆಗಳಲ್ಲಿ ಅವರು ಸ್ಥಾಪಿಸಿದ ದೇಗುಲಗಳ ಸಂಖ್ಯೆ 60ಕ್ಕೂ ಹೆಚ್ಚಿನದು. ನಾರಾಯಣ ಗುರುಗಳು ಸಾಮಾಜಿಕ, ಧಾರ್ಮಿಕ ಸುಧಾರಣೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿ ಎಲ್ಲರೂ
ಸ್ವೀಕರಿಸುವಂತ ತತ್ವಗಳಾದ “ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು.” “ಜಾತಿಯ ಬಗ್ಗೆ ಕೇಳಬೇಡ, ಹೇಳಬೇಡ, ಯೋಚಿಸಬೇಡ.” “ಜಾತಿ ಯಾವುದಾದರೇನು? ಮನುಷ್ಯ ಒಳ್ಳೆಯವನಾಗಿರಬೇಕು” ಎಂದು ಸಾರಿದರು.
ಕೇರಳ ರಾಜ್ಯ
ಸಾಕ್ಷರತೆ ಸಾಧಿಸಿರುವ ಹಿನ್ನೆಲೆಯಲ್ಲಿ ನಾರಾಯಣ ಗುರುಗಳು ಪ್ರಾರಂಭಿಸಿದ ವಿದ್ಯಾಕೇಂದ್ರಗಳು, ದೇವಸ್ಥಾನಗಳು ಬಹಳಷ್ಟು ಪ್ರೇರಕಗಳಾಗಿ ಕಾರ್ಯನಿರ್ವಹಿಸಿವೆ. ದೇವಸ್ಥಾನದ ಹೊಸ್ತಿಲಲ್ಲಿ ನಿಂತು ಜಾತಿ ಪದ್ದತಿಯ ನಿರ್ಮೂಲನಕ್ಕೆ ಕರೆ ಕೊಟ್ಟ ಧೀಮಂತ
ದಾರ್ಶನಿಕ ಶ್ರೀ ನಾರಾಯಣಗುರು. ಗುರುಗಳ ಪ್ರಕಾರ ದೇವಸ್ಥಾನ, ಮಠ, ಮಂದಿರಗಳು ಮಾನವೀಯ
ಮೌಲ್ಯಗಳನ್ನು ಹೊಂದಿದ ಚಟುವಟಿಕೆಗಳ ಮೂಲಕ ಮನುಷ್ಯ ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶ್ರೀಮಂತನಾಗಲು ಸ್ಪೂರ್ತಿ ಕೇಂದ್ರವಾಗಿರಬೇಕು.
ಈ ಮಹಾನ್ ಸಾಮಾಜಿಕ ಕ್ರಾಂತಿಕಾರಕರಾದ ನಾರಾಯಣ ಗುರು ಅವರ
ಸಂಸ್ಮರಣೆಯ ದಿನದೊಂದು ಆ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.
ಕೃಪೆ : ಬಲ್ಲ ಮೂಲಗಳಿಂದ
ಫೋಟೋ : ಗೂಗಲ್
No comments:
Post a Comment