Sunday 9 August 2015

ಆಗಸ್ಟ್ 09
ಕಾಸರಗೋಡಿನ ಕನ್ನಡದ ಗಟ್ಟಿದನಿ ಕಯ್ಯಾರ ಕಿಞ್ಞಣ್ಣ ರೈ ಅಸ್ತಂಗತ.


                ಕನ್ನಡದ ಖ್ಯಾತ ಸಾಹಿತಿ, ಶತಾಯುಷಿ  ನಾಡೋಜಾ ಕಯ್ಯಾರ ಕಿಞ್ಞಣ್ಣ ರೈ ನಿಧನರಾಗಿದ್ದಾರೆ. ಕಾಸರಗೋಡಿನ ಬದಿಯಡ್ಕದ ಸ್ವಗೃಹದಲ್ಲಿ ಆಗಸ್ಟ್ 09 ಭಾನುವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಕಯ್ಯಾರ ಕಿಞ್ಞಣ್ಣ ರೈಗಳು ಮಧ್ಯಾಹ್ನ 3.30 ರ ವೇಳೆಗೆ ಮೃತರಾಗಿದ್ದಾರೆ.ಅವರಿಗೆ 101 ವರ್ಷ ವಯಸ್ಸಾಗಿತ್ತು. ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915 ಜೂನ 8 ರಂದು ಜನಿಸಿದ್ದ ಕಿಞ್ಞಣ್ಣ ರೈ ಸ್ವಾತಂತ್ರ್ಯಸಂಗ್ರಾಮದಲ್ಲಿ ಹೋರಾಡಿದ್ದರು. ಹರಿಜನ ಸೇವಕ ಸಂಘಟನೆಯಲ್ಲಿ ಕೆಲಸ ಮಾಡಿದ್ದು, ಸ್ಥಳೀಯ ಪಂಚಾಯತ್  ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಬಹಳಷ್ಟು ಹೋರಾಟ ಮಾಡಿದ್ದರು.
                ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಕಿಞ್ಞಣ್ಣ ರೈ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು. ಬಳಿಕ ಎಂ.ಎ. ಸ್ನಾತಕೋತ್ತರ ಪದವಿ ಪಡೆದು ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ, ತುಳು, ಕೊಂಕಣಿ ಮತ್ತು ಸಂಸ್ಕೃತ ಭಾಷೆಯಲ್ಲಿ ಸಾಹಿತ್ಯಿಕ ಕೃತಿ, ಕವನಗಳನ್ನು ರಚಿಸಿದ್ದ ರೈ ಅವರು ಮಕ್ಕಳ ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದರು.

ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡ ಗಡಿಕಾಯೆ, ಗುಡಿಕಾಯೆ, ನುಡಿ ಕಾಯೆ,
ಕಾಯಲಾರನೆ ಸಾಯೆ! ಓ ಬನ್ನಿ ಬನ್ನಿ
ಹಾರೆ ಗುದ್ದಲಿ ಕೊಡಲಿ ನೊಗ ನೇಗಿಲೆತ್ತುತಲಿ
ನೆಲದಿಂದ ಹೊಲದಿಂದ ಹೊರಟು ಬನ್ನಿ
ಕನ್ನಡನಾಡಿನಿಂದ ಕಾಡಿಂದ ಗೂಡಿಂದ
ಕಡಲಿಂದ ಸಿಡಿಲಿಂದ ಗುಡುಗಿ ಬನ್ನಿ...

                ಹೀಗೆ ಕನ್ನಡದ ಮನೆಗೆ ಬೆಂಕಿ ಬಿದ್ದಿದೆ ಎಂದು ಗುಡುಗಿದ ಉಜ್ವಲ ಕನ್ನಡಾಭಿಮಾನಿ, ಕನ್ನಡ ಹೋರಾಟದ ಗಡಿನಾಡ ಕಿಡಿ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಮೌಲಿಕ ಸಾಹಿತ್ಯ ಕೃಷಿಯಿಂದ, ಅತ್ಯಮೂಲ್ಯ ಶೈಕ್ಷಣಿಕ ಕೈಂಕರ್ಯದಿಂದ ಕನ್ನಡಿಗರ ಹೃನ್ಮನವನ್ನು ಆವರಿಸಿಕೊಂಡಿದ್ದಾರೆ. ವಿಶೇಷವಾಗಿ ಗಡಿನಾಡ ಕನ್ನಡಿಗರ ದನಿಯಾಗಿರುವ ಕಯ್ಯಾರರು ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಅಪ್ಪಟ ಕನ್ನಡ ನೆಲ ಕಾಸರಗೋಡು ಪ್ರದೇಶವನ್ನು ಕೇರಳ ರಾಜ್ಯಕ್ಕೆ ಸೇರಿಸಿದ ದಿನದಿಂದಲೂ ಹೋರಾಟ ನಡೆಸುತ್ತಲೇ ಇದ್ದಾರೆ. ಇವತ್ತಿಗೂ ಕನ್ನಡ ನಾಡು-ನುಡಿ, ನೆಲ-ಜಲ ವಿಷಯದ ಪ್ರಸ್ತಾಪ ಬಂದಾಗ ಕಯ್ಯಾರರು ಸಿಡಿದೇಳುವ ಕನ್ನಡ ಕವಿ, ಶ್ರೇಷ್ಠ ವ್ಯಕ್ತಿತ್ವ , ಅಧ್ಯಾಪಕರು ಇಂದು ನಮ್ಮನ್ನಗಲಿದ್ದಾರೆ.
                ‘ಕಯ್ಯಾರ ಕಿಞ್ಞಣ್ಣ ರೈಯವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೇ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದಾರೆ.
1997ರಲ್ಲಿ ಮಂಗಳೂರಿನಲ್ಲಿ ಜರುಗಿದ’ 66 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರಿಗೆ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಕರ್ನಾಟಕ ಸರಕಾರ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತ್ತು.

                ಕಾಸರಗೋಡಿನ ಕನ್ನಡ ಮಣ್ಣಿಗೆ ತುಂಬಲಾರದ ನಷ್ಟ.  ಪರಮಾತ್ಮನು ಇವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ನೀಡಲಿ.


No comments: