Wednesday 19 August 2015

​ನಾಡಿನಾದ್ಯಂತ ನಾಗರ ಪಂಚಮಿ ಸಂಭ್ರಮ





ನಾಗರ ಪಂಚಮಿ ಹಬ್ಬದ ಮಹತ್ವವೇನು?

ನಾಗರ ಪಂಚಮಿ ಮತ್ತೆ ಬಂದಿದೆ. ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ.  ಶ್ರಾವಣ  ಮಾಸದ  ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ ಅಥವಾ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ  ಆಚರಿಸುತ್ತಾರೆ.

ನಾಗರ ಪಂಚಮಿ ಎರಡು ಆಚರಣೆಗಳಲ್ಲಿ ಒಂದು ನಾಗರಪೂಜೆ ಇನ್ನೊಂದು ಸಹೋದರ ಸಹೋದರಿಯರ ಭಾವ ಸಂಬಂಧಗಳು ಮುಖ್ಯವಾದವು. ಸಹೋದರಿಯರು ಸಹೋದರರ ಬೆನ್ನಿಗೆ ಹಾಲು, ನೀರು ಎರೆಯುವ ಮೂಲಕ ತವರು ತಂಪಾಗಿರಲಿ ಎಂದು ಹಾರೈಸಿದರೆ, ಸಹೋದರರು ಪ್ರೀತಿಯ ಅಕ್ಕ ತಂಗಿಯರಿಗೆ ಉಡುಗೊರೆ ಕೊಟ್ಟು ಸಂಭ್ರಮಿಸುತ್ತಾರೆ.

ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನ ಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ.

ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಕರಾವಳಿಯಲ್ಲಿ ನಾಗರ ಪಂಚಮಿ ಆಚರಣೆ ಬಹಳ ವಿಶಿಷ್ಟ. ಇಲ್ಲಿ ಬೆಳಗ್ಗಿನಿಂದಲೇ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಹಾವಿನ ಹುತ್ತ ಹಾಗೂ ನಾಗರ ಕಲ್ಲುಗಳಿಗೆ ಹಾಲು ಮತ್ತು ನೀರಿನ ತನಿ ಎರೆಯುತ್ತಾರೆ. ಜತೆಗೆ ತಂಬಿಲ ನೈವೇದ್ಯ ಮಾಡುತ್ತಾರೆ. ಇದೇ ದಿನ ಆಶ್ಲೇಷಾ ಬಲಿ, ನಾಗ ಮಂಡಲ ಮುಂತಾದ ನಾಗ ಸಂಬಂಧೀ ಪೂಜೆಗಳನ್ನು ಮಾಡಲಾಗುತ್ತದೆ.

ನಾಗರಪಂಚಮಿಯಂದು ವಿಷ್ಣುವಿನ ವಾಹನ ಶೇಷನಾಗನಿಗೆ ಸಲ್ಲಿಸುವ ಪೂಜೆ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂಬ ನಂಬಿಕೆಯ ಮೂಲ ಈ ಹಬ್ಬ. ಈ ಸಲುವಾಗಿ ವಾಸುಕಿ, ತಕ್ಷಕ, ಕಾಲಿಯಾ, ಮಣಿಭದ್ರ, ಐರಾವತ, ದೃತರಾಷ್ಟ್ರ, ಕಾರ್ಕೋಟಕ, ಧನಂಜಯ ಮುಂತಾದ ಹಾವುಗಳನ್ನು ಸ್ಮರಿಸಿಕೊಂಡು ಹಾವುಗಳ ವಿಗ್ರಹಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸುವುದು ರೂಢಿ.


ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.

ಎಲ್ಲರಿಗೂ ನಾಗರ ಪಂಚಮಿ ಶುಭಾಶಯಗಳು...

No comments: